ಆರತಿ ಉಕ್ಕಡ ಅಹಲ್ಯಾ ದೇವಿ ಮಾರಮ್ಮ ದೇವಸ್ಥಾನ, ಮಂಡ್ಯ

Aarati Ukkada Ahalya Devi Maramma Temple

ಸ್ಥಳ : ಆರತಿ ಉಕ್ಕಡ ಅಹಲ್ಯಾ ದೇವಿ ಮಾರಮ್ಮ ದೇವಸ್ಥಾನ, ಮಂಡ್ಯ

ಜಿಲ್ಲೆ:   ಮಂಡ್ಯ ಜಿಲ್ಲೆ

ವಿಳಾಸ : SH 7, ಆರತಿಯುಕ್ಕಡ, ಕಡತನಾಲು,  ಪಾಂಡವಪುರ - ತಾಲ್ಲೂಕು, ಮಂಡ್ಯ - ಜಿಲ್ಲೆ , ಕರ್ನಾಟಕ - 571427

ಸಮಯ : 6.00 am - 9.30 pm

ದೂರ :  ಪಾಂಡವಪುರ 5.2 ಕಿ.ಮೀ
             ಶ್ರೀರಂಗಪಟ್ಟಣದಿಂದ  10 ಕಿ.ಮೀ
             ಮಂಡ್ಯದಿಂದ 32 ಕಿ.ಮೀ
             ಮೈಸೂರಿನಿಂದ  27 ಕಿ.ಮೀ
             ಬೆಂಗಳೂರಿನಿಂದ  131 ಕಿ.ಮೀ

ಭೇಟಿ ನೀಡಲು ಉತ್ತಮ ಸಮಯ : ವರ್ಷ ಪೂರ್ತಿ

ಸಾರಿಗೆ ಆಯ್ಕೆಗಳು :  ಬಸ್ /ಕ್ಯಾಬ್/ಆಟೋ

ಪ್ರವೇಶ : ಉಚಿತ

ಪಾರ್ಕಿಂಗ್  : ಉಚಿತ

ಹತ್ತಿರದ ಸ್ಥಳಗಳು : ಕುಂತಿ ಬೆಟ್ಟ, ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ, ತೊಣ್ಣೂರು ಕೆರೆ , ಉಕ್ಕುಡು ದೇವಸ್ಥಾನ, ಮೇಲುಕೋಟೆ, ರಂಗನತಿಟ್ಟು ಪಕ್ಷಿಧಾಮ, ದರಿಯಾ ದೌಲತ್ ಬಾಗ್,  ನಿಮಿಷಾಂಭ ದೇವಸ್ಥಾನ, ಶ್ರೀರಂಗಪಟ್ಟಣ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ,  , ತ್ರಿವೇಣಿ ಸಂಗಮ - ಶ್ರೀರಂಗಪಟ್ಟಣ, ಗುಂಬಜ್‌ - ಶ್ರೀರಂಗಪಟ್ಟಣ , ಕೃಷ್ಣ ರಾಜ ಸಾಗರ ಅಣೆಕಟ್ಟು, ಬೃಂದಾವನ ಉದ್ಯಾನವನ.


ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಆರತಿ ಉಕ್ಕಡವೂ ಸಹ ಒಂದು. ಪಾಂಡವಪುರದಿಂದ 5.2 ಕಿ.ಮೀ, ಶ್ರೀರಂಗಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿ ಪ್ರಶಾಂತ ಹಚ್ಚ ಹಸುರಿನ ನಡುವೆ ನೆಲೆಸಿರುವಳು ತಾಯಿ ಶ್ರೀ ಅಹಲ್ಯಾದೇವಿ. ಎಲ್ಲಾ ವರ್ಗದವರಿಂದ ಪೂಜಿಸಲ್ಪಡುವ ಉಕ್ಕಡದ ಮಾರಮ್ಮನ ದರ್ಶನಕ್ಕಾಗಿ ಇಂದು ಲಕ್ಷಾಂತರ ಜನರು ಮುಂಜಾನೆಯಿಂದ ಸಂಜೆಯವರೆಗೂ ಕಾಯುವುದು ಈ ದೇವಸ್ಥಾನದ ವಿಶೇಷ.

ಉಕ್ಕಡ ತಲುಪುವುದು ಹೇಗೆ

ರೈಲು ಮೂಲಕ

ಪಾಂಡವಪುರ ರೈಲು ನಿಲ್ದಾಣ, ಶ್ರೀರಂಗಪಟ್ಟಣ ರೈಲು ಮಾರ್ಗ ನಿಲ್ದಾಣಗಳು ಉಕ್ಕಡಕ್ಕೆ ಸಮೀಪದ ರೈಲು ನಿಲ್ದಾಣಗಳಾಗಿವೆ. ಮಂಡ್ಯ ರೈಲು ಮಾರ್ಗ ನಿಲ್ದಾಣ (ಮಂಡ್ಯ ಹತ್ತಿರ), ಪಾಂಡವಪುರ ರೈಲು ಮಾರ್ಗ ನಿಲ್ದಾಣ (ಪಾಂಡವಪುರ ಹತ್ತಿರ), ಯಲಿಯೂರು ರೈಲು ಮಾರ್ಗ ನಿಲ್ದಾಣ (ಮಂಡ್ಯ ಹತ್ತಿರ) ಇವುಗಳು ಹತ್ತಿರದ ಪಟ್ಟಣಗಳಿಂದ ತಲುಪಬಹುದಾದ ರೈಲು ಮಾರ್ಗ ನಿಲ್ದಾಣಗಳಾಗಿವೆ.

ರಸ್ತೆ ಮೂಲಕ

ಪಾಂಡವಪುರ, ಕೃಷ್ಣರಾಜಪೇಟೆ, ಮಂಡ್ಯ ಉಕ್ಕಡಕ್ಕೆ ಹತ್ತಿರವಿರುವ ಪಟ್ಟಣಗಳು ​​ಉಕ್ಕಡಕ್ಕೆ ರಸ್ತೆ ಸಂಪರ್ಕವನ್ನು ಹೊಂದಿವೆ.

ಕಥೆ

ಅದು ಮಹಾ ಮುನಿ ಗೌತಮರ ಆಶ್ರಮ. ದೇವಲೋಕದಿಂದ ಧರೆಗಿಳಿದು ಬಂದ ದೇವೇಂದ್ರ ಗೌತಮ ಮಹರ್ಷಿಗಳ ಪರ್ಣಕುಟೀರದ ಪ್ರಶಾಂತ ಪರಿಸರಕ್ಕೆ ಮಾರುಹೋದ. ದೇವೇಂದ್ರನಿಗೆ ತುಂಬಾ ದಾಹವಾಗತೊಡಗಿತ್ತು. ನೀರನ್ನು ಕುಡಿದರೂ ಅವನಿಗೆ ದಾಹ ತಣಿಯಲಿಲ್ಲ, ಕಾರಣ ಅವನ ಮನಸ್ಸು ಆಶ್ರಮದಲ್ಲಿದ್ದ ಒಂದು ಹೆಣ್ಣನ್ನು ನೋಡಿ ಚಂಚಲವಾಯಿತು. ಗೌತಮರ ಆಶ್ರಮದಲ್ಲಿ ಸೌಂದರ್ಯದ ಗಣಿ! ದೇವೇಂದ್ರನಿಗೆ ಕುತೂಹಲ ಹೆಚ್ಚಾಯಿತು. ಇವಳ ಚಲುವಿಗೆ ಮಾರುಹೋದ ಇಂದ್ರನಲ್ಲಿ ಮೋಹ ಹೆಚ್ಚಾಯಿತು.

ಆಶ್ರಮದಲ್ಲಿ ಹೂಗಳನ್ನು ಕೀಳುತ್ತಿದ್ದ ಅಹಲ್ಯೆಯನ್ನು ಗೌತಮರು ಕರೆದರು. ಆಗ ದೇವೇಂದ್ರನಿಗೆ ಈ ಅಪ್ಸರೆ ಅಹಲ್ಯೆ, ಮಹಾ ಮುನಿಗಳ ಧರ್ಮಪತ್ನಿ, ಪತಿವ್ರತಾ ಶಿರೋಮಣಿ ಎಂಬ ವಿಚಾರ ತಿಳಿಯಿತು. ಈ ಋಷಿ ಪತ್ನಿಯ ಸೌಂದರ್ಯವನ್ನು ನೋಡಿ ಮೋಹ ಪರವಶನಾಗಿದ್ದೇನೆ, ನಾನು ದೇವೇಂದ್ರ ನಿನ್ನನ್ನು ಮೋಹಿಸುತ್ತಿದ್ದೇನೆ, ನನ್ನ ಸ್ವೀಕರಿಸು ಎಂದು ಕೋರಿಕೆ ಸಲ್ಲಿಸಿದರೆ, ಪತಿವ್ರತಾ ಶಿರೋಮಣಿ ನನ್ನನ್ನು ಒಪ್ಪುವುದಿಲ್ಲ. ಏನಾದರೂ ಆಗಲಿ ಒಂದು ಕ್ಷಣದ ಮಟ್ಟಿಗಾದರೂ ಅಹಲ್ಯಾದೇವಿ ನನಗೆ ಬೇಕು ಎಂದು ಆಲೋಚಿಸುತ್ತಾನೆ.

ಅಹಲ್ಯಾದೇವಿ ಮಹಾ ಪತಿವ್ರತೆ, ಬ್ರಹ್ಮನ ಮಗಳು, ತಂದೆ ಸ್ವತಃ ಸೃಷ್ಠಿಕರ್ತ, ಆದುದರಿಂದ ಸಕಲ ಸೌಂದರ್ಯವನ್ನು ಮಗಳಿಗೆ ಧಾರೆ ಎರೆದು ಜಗತ್ತಿನ ಅತಿಲೋಕ ಸುಂದರಿಯಾಗಿದ್ದಾಳೆ. ಗೌತಮರ ಧರ್ಮಪತ್ನಿಯಾಗಿದ್ದುಕೊಂಡು ಸಕಲ ಸುಖ ಭೋಗಗಳನ್ನು ತೊರೆದು ಪತಿಯೇ ಪರದೈವವೆಂದು ಬಾವಿಸುತ್ತಾ ಪತಿಗೆ ನೆರವಾಗುತ್ತಾ ವಾಸಿಸುತ್ತಿದ್ದಳು. ಇಂತಹ ಸಾದ್ವಿಮಣಿ ಆಹಲ್ಯದೇವಿಗೆ ಎಡಗಣ್ಣು ಅದುರ ತೊಡಗಿದಾಗ ಏನೋ ಕೇಡು ಕಾದಿದೆ ಎಂದು ಗಾಬರಿಗೊಂಡಳು. ಪತಿದೇವರ ಸೇವೆಯಲ್ಲಿ ಯಾಕೋ ತೊಡಕುಂಟಾಯಿತು ಎಂದು ಯೋಚಿಸಿದಳು ಮತ್ತು ಚಿಂತಿಸಿದಳು.
ಹೇಗಾದರೂ ಸರಿ ಅಹಲ್ಯಾದೇವಿಯನ್ನು ಪಡೆಯಲೇ ಬೇಕೆಂದು ಬಯಸಿದ ದೇವೇಂದ್ರ ಕೆಟ್ಟ ಯೋಚನೆ ಮಾಡಿ ನಟ್ಟ ನಡುರಾತ್ರಿ ಗೌತಮರ ಆಶ್ರಮಕ್ಕೆ ಬಂದ. ಇಂದ್ರ ತನ್ನ ಮಾಯಾ ಜಾಲದಿಂದ ಕೋಳಿಯಂತೆ ಕೂಗತೊಡಗಿದ. ಇದರಿಂದ ಬೆಳಗಾಯಿತೆಂದು ತಿಳಿದ ಗೌತಮರು ಸ್ನಾನ ಮಾಡಲು ನದಿಯತ್ತ ಹೊರಟರು. ಪ್ರಶಾಂತವಾಗಿದ್ದ ಗಂಗೆಯಲ್ಲಿ ಮೀಯಲು ಕೈ ಹಾಕಿದೊಡನೆ ನಿದ್ರೆಯಿಂದ ಎದ್ದ ಗಂಗಾ ಮಾತೆ ಗೌತಮರಿಗೆ “ನಾನು ಇನ್ನು ನಿದ್ರಯಲ್ಲಿ ಇದ್ದೇನೆ, ಬೆಳಕು ಹರಿಯುವ ಮೊದಲೆ ಸ್ನಾನಕ್ಕೆ ಬಂದಿದ್ದೀರಿ” ಎಂದಾಗ, ಗೌತಮರು “ಕೋಳಿ ಕೂಗಿದ ನಂತರವೇ ಬಂದಿರುವುದಾಗಿ” ಹೇಳಿದರು. ಆಗ ಗಂಗಾ ಮಾತೆ “ಇಂದೇಕೋ ಏನೋ ಅವಘಢ ನಡೆಯುತ್ತಿದೆ. ಬೇಗ ಆಶ್ರಮಕ್ಕೆ ಹೋಗಿ” ಏನ್ನುತ್ತಾಳೆ, ಗೌತಮರು ವಾಪಸ್ಸಾಗುತ್ತಾರೆ.

ಅಷ್ಠರಲ್ಲಾಗಲೇ ಮಾಯಾವಿ ಇಂದ್ರ ಗೌತಮರ ವೇಷದಲ್ಲಿ ಅಹಲ್ಯೆಯನ್ನು ಪೀಡಿಸುತ್ತಿರುತ್ತಾನೆ. ಒಪ್ಪದ ಅಹಲ್ಯಾದೇವಿ ಯಾರೋ ಮಾಯಾವಿ ರಾಕ್ಷಸ ತನ್ನ ಪತಿಯ ರೂಪದಲ್ಲಿ ಬಂದಿದ್ದಾನೆಂದು ಆಶ್ರಮಕ್ಕೆ ಬಿಟ್ಟು ಕೊಳ್ಳದೆ ನೀನು ಯಾರು? ಏ ಮಾಯಾವಿ ನನ್ನ ಹತ್ತಿರ ಒಂದೆಜ್ಜೆಯಿಟ್ಟರೆ ಗೌತಮರ ಕೆಂಗೆಣ್ಣಿಗೆ ಗುರಿಯಾಗುತ್ತೀಯಾ ಎಚ್ಚರ! ಎಂದು ಮಾಯಾವಿ ಇಂದ್ರನೊಡನೆ ಆಗಷ್ಟೇ ಮಾತಿಗಿಳಿಯುತ್ತಾಳೆ.
ಮಹಾ ಕೋಪಿಷ್ಠರಾದ ಗೌತಮರು ಆಶ್ರಮಕ್ಕೆ ಹಿಂತಿರುಗಿದಾಗ ಇಂದ್ರ ಅಹಲ್ಯಾದೇವಿರವರ ವಾದ ವಿವಾದ ನಡೆಯುತ್ತಿರುತ್ತದೆ. ತನ್ನ ಪತ್ನಿ ಪರಪುರುಷನ ಜೊತೆ ಮಾತನಾಡುತ್ತಿರುವುದನ್ನು ಕಂಡು ತಪ್ಪು ತಿಳುವಳಿಕೆಯಿಂದ ಕೆಂಡಾಮಂಡಲರಾಗಿ ದೇವಿಗೆ ನೀನು ಕಲ್ಲಾಗಿ ಹೋಗು ಎಂದು ಶಾಪ ನೀಡುತ್ತಾರೆ.
ಗೌತಮರನ್ನು ಕಂಡ ಮಾಯಾವಿ ಇಂದ್ರ ವಾಸ್ತವಿಕತೆಯ ಅರಿವಾಗಿ ಮಹರ್ಷಿಗಳ ಕಾಲು ಹಿಡಿದು ತನ್ನ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾನೆ. ಇಲ್ಲಿ ಅಂತಹ ಪ್ರಮಾದ ಜರುಗಿಲ್ಲ. ನಾನು ತಮ್ಮ ಪತ್ನಿಯನ್ನು ಕಂಡು ಮೋಹ ಪರವಶನಾಗಿದ್ದು ನಿಜ, ಈ ವಿಚಾರವಾಗಿ ದೇವಿ ಮತ್ತು ನನ್ನೊಡನೆ ವಾದ ನಡೆದಿತ್ತಷ್ಠೆ, ಎಂದು ಗೋಳಿಡುತ್ತಾನೆ. ಮೊದಲೇ ಕೋಪಿಷ್ಠರಾದ ಗೌತಮರು ಇಂದ್ರನ ಮಾತಿನಿಂದ ಕೆರಳಿ, “ಋಷಿ ಪತ್ನಿಯನ್ನು ಪೀಡಿಸಿದ ಕಾರಣ ನಿನ್ನ ದೇಹದಲ್ಲೆಲ್ಲಾ ಕಣ್ಣುಗಳಾಗಿ ಅವುಗಳೆಲ್ಲಾ ಹುಣ್ಣಾಗಿ ಕೀವು ಸದಾ ಸೋರುತ್ತಿರಲಿ, ಈ ಜಗತ್ತು ಅಸಹ್ಯಪಡುವಂತಾಗಲಿ” ಎಂದು ಇಂದ್ರನಿಗೆ ಶಾಪವಿತ್ತರು.

ಅಹಲ್ಯಾದೇವಿ ತನ್ನದಲ್ಲದ ತಪ್ಪಿಗೆ ಶಾಪಗ್ರಸ್ತಳಾಗಿ ಪತಿ ಗೌತಮರಲ್ಲಿ ಸಪ್ತಸಾಗರವೇ ಉಕ್ಕಿ ಹರಿಯುವಂತೆ ಕಣ್ಣೀರಿಡುತ್ತಾಳೆ. ಅಷ್ಟರಲ್ಲಾಗಲೇ ಗೌತಮರು ಅಹಲ್ಯೆಗೆ ಶಾಪ ನೀಡಿರುತ್ತಾರೆ. ಒಮ್ಮೆ ಕೊಟ್ಟ ಶಾಪ ಮರಳಿ ಪಡೆಯಲು ಸಾಧ್ಯವಿಲ್ಲ. ಸತ್ಯ ತಿಳಿದ ಗೌತಮರು “ನೀನು ತಪ್ಪು ಮಾಡದಿದ್ದ ಸಂದರ್ಭದಲ್ಲಿ ಮುಂದೊಂದು ದಿನ ಶ್ರೀರಾಮನು ಈ ಮಾರ್ಗವಾಗಿ ಬಂದಾಗ ಆತನ ಪಾದ ಸ್ಪರ್ಶದಿಂದ ಶಾಪ ವಿಮೋಚನೆಯಾಗುತ್ತದೆ. ನೀನು ತಪ್ಪು ಮಾಡಿದ್ದೇ ಆದರೆ ನಿನ್ನ ಶಾಪ ವಿಮೋಚನೆ ಯಾಗುವುದಿಲ್ಲ” ಎಂದು ತಿಳಿಸಿರುತ್ತಾರೆ. ಅಹಲ್ಯಾದೇವಿಯು ಕಲ್ಲಾಗುತ್ತಾಳೆ.

ಯುಗಗಳು ಕಳೆಯುತ್ತವೆ. ಶಿಲಾರೂಪಿ ಅಹಲ್ಯೆ ಶಾಪ ವಿಮೋಚನೆಯನ್ನು ಎದುರು ನೋಡುತ್ತಿರುತ್ತಾಳೆ. ದಟ್ಟ ಕಾನನದಲ್ಲಿ ಶ್ರೀರಾಮಚಂದ್ರ ಲಕ್ಷ್ಮಣ ಸಂಚರಿಸುತ್ತಿರುತ್ತಾರೆ. ಮಾರ್ಗಮಧ್ಯೆ ಗೌತಮ ಮುನಿಗಳು ವಾಸಿಸುತ್ತಿದ್ದ ಆಶ್ರಮದ ಬಳಿ ಬರುತ್ತಾರೆ. ಅಂದು ಗುಹೆಯಲ್ಲಿ ಸೀತೆಯನ್ನು ಬಿಟ್ಟು ಶ್ರೀರಾಮ ಲಕ್ಷ್ಮಣರು ಬರುತ್ತಿರಬೇಕಾದರೆ ದಪ್ಪವಾದ ಬಂಡೆಯೊಂದರ ಮೇಲೆ ಏಕ ಪತ್ನಿ ವ್ರತಸ್ಥನಾದ ಶ್ರೀರಾಮನ ಪಾದ ಸ್ವರ್ಶವಾಗುತ್ತದೆ. ತಟ್ಟನೆ ಕಲ್ಲಿನ ಬಂಡೆ ಸೌಂದರ್ಯವತಿ ಹೆಣ್ಣೊಬ್ಬಳ ರೂಪದಲ್ಲಿ ಪರಿವರ್ತಿತವಾಗುತ್ತದೆ.

ಅಹಲ್ಯಾದೇವಿ ರಾಮನಿಗೆ ತನ್ನ ಕಥೆಯನ್ನೆಲ್ಲಾ ಹೇಳಿ ನಮಸ್ಕರಿಸುತ್ತಾಳೆ. ಆಗ ರಾಮ ಮಹಾ ಪತಿವ್ರತೆಯ ದರ್ಶನ ಪಡೆದು ಜನ್ಮ ಸಾರ್ಥಕವಾಯಿತು, ಜಗತ್ ಜನನಿಯನ್ನು ಕಣ್ಣಾರೆ ಕಾಣುವ ಸೌಬಾಗ್ಯ ದೊರೆತಿದ್ದು ನಮ್ಮ ಪುಣ್ಯವೆಂದು ಆಕೆಯ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತಾನೆ. ಶಾಪ ವಿಮೋಚನೆಯಾದ ವಿಷಯ ಅರಿವಾಗಿ ತಕ್ಷಣ ಗೌತಮರೂ ಪ್ರತ್ಯಕ್ಷರಾಗುತ್ತಾರೆ.

ಅಹಲ್ಯೆ ಪಾರ್ವತಿ ಪರಮೇಶ್ವರರನ್ನು ಪ್ರಾರ್ಥಿಸುತ್ತಾಳೆ, ದೇವಾನುದೇವತೆಗಳೆಲ್ಲಾ ಪ್ರತ್ಯಕ್ಷರಾಗುತ್ತಾರೆ. ಅಹಲ್ಯೆಯ ತಂದೆ ಬ್ರಹ್ಮನೂ ಪ್ರತ್ಯಕ್ಷನಾಗುತ್ತಾನೆ, ಎಲ್ಲರೂ ಏನು ವರ ಬೇಕೆಂದು ಕೇಳುತ್ತಾರೆ. ಆಗ ಅಹಲ್ಯೆ “ನೀವು ಕೊಟ್ಟ ಈ ಸೌಂದರ್ಯದಿಂದ ನಾನು ಕಳಂಕವನ್ನು ಹೊರಬೇಕಾಯಿತು, ಈ ಸೌಂದರ್ಯ ನನಗೆ ಸಾಕು ಎಂದು ಕೇಳುತ್ತಾಳೆ. ಆಗ ಪರಮೇಶ್ವರರು ಅಹಲ್ಯೆಯನ್ನು ಕುರಿತು “ಮಗು ಅಹಲ್ಯೆ ನೀನು ಮಾಹಾನ್ ಪತಿವ್ರತೆ, ಸೌಂದರ್ಯವೆಂಬುವುದು ನಿನಗೆ ಮುಳುವಾಯಿತು, ನಿನ್ನಂತೆಯೇ ಲಕ್ಷಾಂತರ ಮಹಿಳೆಯರು ಭೂಲೋಕದಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ದುಷ್ಠರನ್ನು ಶಿಕ್ಷಿಸಲು ಶಕ್ತಿ ದೇವತೆಯಾದ ಮಾರಮ್ಮಳಾಗಿ ಅವತರಿಸು” ಎಂದು ವರ ನೀಡುತ್ತಾರೆ.

ಹೀಗೆ ದೇವತೆಗಳ ಅನುಗ್ರಹದಿಂದ ಅಹಲ್ಯಾದೇವಿಯು ಮಾರಮ್ಮಳಾಗಿ ಮರದ ಕೊರಡಿನ ಮೂರ್ತಿಯ ರೂಪತಾಳಿ ಕಾವೇರಿ ನದಿಯಲ್ಲಿ ಆರತಿ ಉಕ್ಕಡ ಗ್ರಾಮದ ಬೆಸ್ತ ಜನಾಂಗದವರಿಗೆ ದೊರೆಯುತ್ತಾಳೆ.

Location

Post a Comment